‘ರಥಾವರ’ ಎನ್ನುವ ಸೂಪರ್ ಹಿಟ್ ಚಿತ್ರವನ್ನು ಕೊಡುಗೆಯಾಗಿ ನೀಡಿದ ಸಂಸ್ಥೆ ಧರ್ಮಶ್ರೀ ಎಂಟರ್ ಪ್ರೈಸಸ್. ಈಗ ಇದೇ ಲಾಂಛನದಲ್ಲಿ ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ‘ವಸುದೈವ ಕುಟುಂಬಕಂ’ ಎಂಬ ಚಿತ್ರವನ್ನು ಆರಂಭಿಸುವುದಾಗಿ ಘೋಷಿಸಿದ್ದರು. ಈಗ ‘ವಸುದೈವ ಕುಟುಂಬಕಂ’ಗೆ ಚಾಲನೆ ದೊರೆತಿದೆ.
ನವ ನಿರ್ದೇಶಕ ಗಿರಿಧರ್ ಅವರ ಸಾರಥ್ಯವಿರುವ ‘ವಸುದೈವ ಕುಟುಂಬಕಂ’ ಚಿತ್ರಕ್ಕೆ ಶಮಂತ್ವೀರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಶ್ರೀ ಮಧುರ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ರೂಪುಗೊಂಡಿವೆ. ರವೀಂದ್ರ ಸೊರಗಾಂವಿ ಕಂಠದಲ್ಲಿ “ನೋಡಿದರೂ ನಂಬಬೇಡ.. ಹೇಳಿದರೂ ಕೇಳಬೇಡ”, ಅನುರಾಧಾ ಭಟ್ ಹಾಡಿರುವ “ರಾಜರ ಊರಲ್ಲಿ ಬಂಗಾರದ ಮನೆಯಲ್ಲಿ” ಮತ್ತು ರಾಜೇಶ್ ಕೃಷ್ಣನ್ ಮತ್ತು ಅನುರಾಧಾ ಭಟ್ ಹಾಡಿರುವ “ಪ್ರೀತಿ ಹುಟ್ಟುವ ಹೃದಯಕೆ... ಶರಣು ಶರಣು ಎಂದೆ...” ಎಂಬ ಹಾಡುಗಳಿಗೆ ಈಗಾಗಲೇ ಧ್ವನಿಮುದ್ರಣ ಮಾಡಲಾಗಿದೆ. “ಒಳಿತು ಮಾಡು ಮನುಷ... ನೀ ಇರೋದು ಮೂರು ದಿವಸ” ಹಾಡಿನ ಖ್ಯಾತಿಯ ನಮ್ ಋಷಿ ಈ ಹಾಡುಗಳನ್ನು ರಚಿಸಿದ್ದಾರೆ.
ಉತ್ತಮ ಸಾಂಸಾರಿಕ ಕಥಾ ಹಂದರ ಹೊಂದಿರುವ ‘ವಸುದೈವ ಕುಟುಂಬಕಂ’ ಚಿತ್ರದ ಸ್ಕ್ರಿಪ್ಟ್ ವರ್ಕ್ ಪೂರ್ಣಗೊಂಡಿದ್ದು, ತಂತಜ್ಞರು ಮತ್ತು ತಾರಾಗಣದ ಆಯ್ಕೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ನವಂಬರ್ ಮೊದಲ ವಾರದಿಂದ ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ಆರಂಭಗೊಳ್ಳಲಿದೆ.